ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿನ ಏಳುಸುತ್ತಿನ ಕೋಟೆ ಎಂದೇ ಹೆಸರಾದಿರುವ ಚಿತ್ರದುರ್ಗಕ್ಕೆ ಕೇವಲ 28 ಕಿ .ಮೀ ದೂರದಲ್ಲಿರುವ ಒಂದು ಪುಣ್ಯ ಕ್ಷೇತ್ರವೇ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ನೆಲೆಸಿರುವ ಹೊರಕೆರೆದೇವರಪುರ.
ಹೊರಕೆರೆದೇವರಪುರದ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿಯ ಜಾತ್ರೆಯು ಪ್ರತಿವರ್ಷ ಮಾರ್ಚ್/ಎಪ್ರಿಲ್ ನಲ್ಲಿ ಬರುವ ಹೋಳಿಹಬ್ಬದ ದಿನ ಆಚರಿಸಲಾಗುತ್ತದೆ, ಈ ಜಾತ್ರೆಯ ಸಮಾರಂಭಕ್ಕೆ ಭಕ್ತಜನ ಸಮೂಹವೇ ಹರಿದು ಬರುತ್ತದೆ.
ಅಂದು ಅಲಂಕೃತವಾದ ರಥದ ಮೇಲೆ ಭಗವಂತನು ಕುಳಿತಾಗ ಸಮಸ್ತ ಭಕ್ತರೂ ರಥವನ್ನು ಭಕ್ತಿಯಿಂದ ಎಳೆಯುತ್ತಾರೆ. ರಥೋತ್ಸವದ ಸಮಯದಲ್ಲಿ ಚಲಿಸುವ ರಥದ ಸುತ್ತ ಗರುಡವು ಹಾರಾಡುತ್ತ ಬಂದು ಮೂರು ಸುತ್ತು ಪ್ರದಕ್ಷಿಣೆ ಹಾಕುವ ಲೀಲೆಯನ್ನು ಭಕ್ತರು ಗಮನಿಸಬಹುದಾಗಿದೆ, ಸದ್ ಭಕ್ತರು ಗರುಡನ ಆಗಮನದ ದಿವ್ಯದರ್ಶನವನ್ನು ಕಂಡು ಪುನೀತರಾಗುತ್ತಾರೆ, ಇದು ಒಂದು ಪವಾಡ ಎಂದೇ ಹೇಳಬಹುದು.
ರಥವನ್ನು ಎಳೆಯುವಾಗ ಬಾಳೆಹಣ್ಣು, ತೂರುಬೆಲ್ಲ, ಮೆಣಸು ಮತ್ತು ಹೂವುಗಳನ್ನು ರಥದ ಮೇಲೆ ತೂರಿ ಭಕ್ತರು ತಮ್ಮ ಭಕ್ತಿಯನ್ನು ಅರ್ಪಿಸುತ್ತಾರೆ. ಈ ಸಮಯದಲ್ಲಿ ಭಜನೆಯವರ ಸುಶ್ರಾವ್ಯ ಸಂಗೀತ, ವಾದ್ಯದವರ ನಾದ ವೈಭವ ಮತ್ತು ಇತ್ಯಾದಿ ಸಂಗಮಗೊಂಡ ರಥೋತ್ಸವವು ಸಾಗುತ್ತದೆ. ನಂತರ ನಿಗದಿಯಾದ ಸ್ಥಳಕ್ಕೆ ರಥ ಬಂದು ನಿಲ್ಲುತ್ತದೆ, ಆಗ ಮಹಾಮಂಗಳಾರತಿ ನಡೆಯುತ್ತದೆ.
ಜಾತ್ರೆಯ ಈ ದಿನಗಳಲ್ಲಿ ಸ್ವಾಮಿಗೆ ಕಲ್ಯಾಣೋತ್ಸವ, ಅಶ್ವವಾಹನೋತ್ಸವ, ಅನೆ ಉತ್ಸವ, ಹನುಮಂತೋತ್ಸವ, ಶೇಷೋತ್ಸವ, ಬೆಳ್ಳಿ ಪಲ್ಲಕ್ಕಿ ಉತ್ಸವ, ಮತ್ತು ಹೂವಿನ ಪಲ್ಲಕ್ಕಿ ಉತ್ಸವಗಳು ನಡೆಯುತ್ತವೆ.
ಈ ಜಾತ್ರೆಯ ಸಮಾರಂಭಕ್ಕೆ ಸಹಸ್ರಾರು ಭಕ್ತರು ಬಂದು ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ.